ಬಂಟರ ಭವನದಲ್ಲಿ ಪ್ರಕಾಶಮಾನಗೊಂಡ ಕಲಾ ಪ್ರಕಾಶ ಪ್ರತಿಷ್ಠಾನದ ರಜತೋತ್ಸವ ಸಂಭ್ರಮ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಒಕ್ಟೋಬರ್ 9 , 2013
|
ಮುಂಬಯಿ : ಬೃಹನ್ಮುಂಬಯಿಯಲ್ಲಿನ ಗೌರವಾನ್ವಿತ ಕಲಾ ಸಂಘಟಕ ಪ್ರಕಾಶ್ ಎಂ.ಶೆಟ್ಟಿ ಸುರತ್ಕಲ್ ಸಾರಥ್ಯದ ಸಾಂಸ್ಕೃತಿಕ ಸಂಘಟನೆ ಪ್ರಸಿದ್ಧಿಯ ಕಲಾ ಪ್ರಕಾಶ ಪ್ರತಿಷ್ಠಾನ ಮುಂಬಯಿ ಸಂಸ್ಥೆಯು ಇಂದಿಲ್ಲಿ ಬುಧವಾರ ಕುರ್ಲಾ ಪೂರ್ವದಲ್ಲಿನ ಬಂಟರ ಭವನದಲ್ಲಿ ದಿನಪೂರ್ತಿ ಕಾರ್ಯಕ್ರಮಗಳೊಂದಿಗೆ ರಜತೋತ್ಸವ ಸಂಭ್ರಮಿಸಿತು.
ಶ್ರೀ ಉಮಾಮಹೇಶ್ವರೀ ದೇವಸ್ಥಾನ ಜೆರಿಮರಿ ಇದರ ಶ್ರೀ ಎಸ್.ಎನ್.ಉಡುಪ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮೀರಾರೋಡ್ನ ಶ್ರೀ ಸಾಣೂರು ಸಾತಿಂಜ ಜನಾರ್ಧನ ಭಟ್ ಪಾದಾರ್ಪಣೆಗೈದು ದೀಪ ಪ್ರಜ್ವಲಿಸಿ ಪ್ರತಿಷ್ಠಾನದ ಬೆಳ್ಳಿ ಬೆಳಕು ಸಂಭ್ರಮಕ್ಕೆ ಶುಭಾಶೀರ್ವಾದಗೈದರು. ಈ ಸಂದರ್ಭದಲ್ಲಿ ಉದ್ಯಮಿಗಳಾದ ಉದಯ ಕುಮಾರ್, ನಲ್ಯಗುತ್ತು ಪ್ರಕಾಶ್ ಟಿ.ಶೆಟ್ಟಿ, ಟಿ.ರವೀಂದ್ರ ಪೂಜಾರಿ, ಎಸ್.ಟಿ ವಿಜಯಕುಮಾರ್ ತಿಂಗಳಾಯ, ಅಶೋಕ್ ಸಸಿಹಿತ್ಲು, ಸದಾಶಿವ ಶೆಟ್ಟಿ ಬಂಟ್ವಾಳ ಸೇರಿದಂತೆ ಪ್ರತಿಷ್ಠಾನದ ಅಧ್ಯಕ್ಷ ನವೀನ್ಚಂದ್ರ ಜೆ.ಶೆಟ್ಟಿ ಪಡುಬಿದ್ರಿ, ಗೌರವಾಧ್ಯಕ್ಷ, ರತ್ನಾಕರ ಶೆಟ್ಟಿ ಮುಂಡ್ಕೂರು, ಕಾರ್ಯದರ್ಶಿ ಪ್ರೇಮ್ ಬಿ.ಶೆಟ್ಟಿ ಸುರತ್ಕಲ್, ಕೋಶಾಧಿಕಾರಿ ಶ್ರೀಮತಿ ಸುನೀತಾ ಪಿ.ಶೆಟ್ಟಿ ಉಪಸ್ಥಿತರಿದ್ದರು.
ಇದು 25ರ ಕಲಾ ಸಂಭ್ರಮ. ಕಲೆಯೊಳಗಿನ ಕತ್ತಲೆ ದೂರವಾಗಿರಿಸಿ ಕಲಾಮಾಯವಾಗಿ ಪ್ರಕಾಶಮಯವಾಗಲಿ. ಯಕ್ಷಗಾನ ಸೇರಿದಂತೆ ಸರ್ವ ಕಲೆಗಳು ಇಂತಹ ವೇದಿಕೆಯ ಮೂಲಕ ಬೆಳಗುತ್ತಾ ಸಂಸ್ಥೆಯೂ ಕೂಡಾ ಸುವರ್ಣಮಯ ಆಗಿ ಬೆಳೆಯಲಿ ಎಂದು ಉಡುಪರು ಅನುಗ್ರಹಿಸಿದರು.
ಸಂಭ್ರಮದ ನಿಮಿತ್ತ ಪೂರ್ವಾಹ್ನ `ಸುಪ್ರಭಾತ ಸಂಭ್ರಮ' ಕಾರ್ಯಕ್ರಮ ನಡೆಸಲಾಗಿದ್ದು, ಯಕ್ಷಗಾನ ದಿಗ್ಗಜರನೇಕರ ಒಕ್ಕೂಟ, ಶ್ರೀ ಅನಂತಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿ ಪೆರ್ಡೂರು ಇದರ ಅಗ್ರಗಣ್ಯ ಶ್ರೇಷ್ಠ ಕಲಾವಿದರಿಂದ ಬಡಗು ತಿಟ್ಟಿನ ಅಮೋಘ ಯಕ್ಷಗಾನ ಬಯಲಾಟ `ಭಕ್ತ ಚಂದ್ರಹಾಸ-ದುಷ್ಟಬದ್ಧಿ' ಪುಣ್ಯಪ್ರಸಂಗ ಪ್ರದರ್ಶಿಸಲ್ಪಟ್ಟಿತು.
ಯಕ್ಷಗಾನ ಕಲಾವಿದ ಸುರೇಂದ್ರ ಕುಮಾರ್ ಹೆಗ್ಡೆ ಅವರ ಸಭಾ ಸಾರಥ್ಯದಲ್ಲಿ ಮಧ್ಯಾಹ್ನ ಸುಮಾರು 15 ಕಲಾವಿದರನ್ನು ಸನ್ಮಾನಿಸಲಾಗಿದ್ದು, ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಮುಖ್ಯ ಅತಿಥಿಯಾಗಿ ಹಿರಿಯ ಹೊಟೇಲು ಉದ್ಯಮಿ ಪದ್ಮನಾಭ ಎಸ್.ಪಯ್ಯಾಡೆ ಹಾಗೂ ಗೌಅರವ ಅತಿಥಿಗಳಾಗಿ ಉದ್ಯಮಿಗಳಾದ ಉಳ್ತೂರು ಮೊಹನ್ದಾಸ್ ಶೆಟ್ಟಿ, ಅಶೋಕ್ ಎಂ.ಕೋಟ್ಯಾನ್, ಅನಿಲ್ ಶೆಟ್ಟಿ ಏಳಿಂಜೆ, ಟಿ.ರವೀಂದ್ರ ಪೂಜಾರಿ, ಅಶೋಕ್ ಪುರೋಹಿತ್, ರತ್ನಾಕರ ಜಿ.ಶೆಟ್ಟಿ, ರಾಘು ಪಿ.ಶೆಟ್ಟಿ, ತುಕಾರಾಮ ರೈ, ಅನಿಲ್ ಶೆಟ್ಟಿ ಹೆರ್ಗ, ನಿತೀಶ್ ಶೆಟ್ಟಿ ಜಡ್ಯಾಡಿ ಮತ್ತಿತರ ಸಹೃದಯೀ ಗಣ್ಯರ ಗಡಣದೊಂದಿಗೆ ಹಿರಿಯ ಕಲಾವಿದರನ್ನು `ಕಲಾ ಪ್ರಕಾಶ'ದಿಂದ ಬಡಗುತಿಟ್ಟಿನ ಯಕ್ಷಶಿರೋ ರತ್ನಾಕರರಾದ ಮಜ್ಜಿಗೆಬೈಲು ಆನಂದ ಶೆಟ್ಟಿ, ಜಲವಳ್ಳಿ ವೆಂಕಟೇಶ ರಾವ್, ಆರ್ಗೋಡು ಮೋಹನ್ದಾಸ್ ಶೆಣೈ, ಎಂ.ಎನ್ ನಾಯ್ಕ, ಗಾವಲಿ ಶೀನ ಕುಲಾಲ್, ದಯಾನಂದ ನಾಗೂರು, ಹಾರಾಡಿ ಸರ್ವ, ತೀರ್ಥಹಳ್ಳಿ ಗೋಪಾಲ ಆಚಾರ್ಯ, ಹೆಮ್ಮಾಡಿ ರಾಮ ಪೂಜಾರಿ, ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯ, ಆನಂದ ದೇವಾಡಿಗ ಕಮಲಶಿಲೆ, ರಾಘವೇಂದ್ರ ಆಚಾರ್ಯ ಜನ್ಸಾಲೆ, ಮೊಳಹಳ್ಳಿ ಹಿರಿಯ ನಾಯಕ ಮತ್ತು ವಂಡ್ಸೆ ನಾಗಪ್ಪ ಶೆಟ್ಟಿ (ಪರವಾಗಿ ಅವರ ಸುಪುತ್ರ) ರನ್ನು ಮತ್ತು ಕನ್ನಡ ಕಲಾಕೇಂದ್ರದ ಅಧ್ಯಕ್ಷ ಬಿ.ಬಾಲಚಂದ್ರ ರಾವ್ ಹಾಗೂ ಮಹಾನಗರದಲ್ಲಿನ ಹಿರಿಯ ಕಲಾ ಸಂಘಟಕ ಮೂಳೂರು ಸಂಜೀವ ಕಾಂಚನ್ (ಪರವಾಗಿ ಅವರ ಸುಪುತ್ರ ಉದಯ ಎಸ್. ಕಾಂಚನ್) ಅವರನ್ನು ಸಮ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಜನಾರ್ಧನ ರೈ ಪುರಿಯಾ ಅವರ `ಪರಿವರ್ತನಾ ಸುದ್ದಿ' ನೂತನ ಕನ್ನಡ ಮಾಸಿಕವನ್ನು ಕಟೀಲು ಶ್ರೀಕ್ಷೇತ್ರದ ವೇ| ಮೂ| ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರು ಬಿಡುಗಡೆ ಗೊಳಿಸಿ ಶುಭಕೋರಿದರು.
ಸಂಸ್ಥೆಗಳನ್ನು ಬೆಳ್ಳಿಹಬ್ಬದ ಸಡಗರಕ್ಕೆ ಸಜ್ಜುಗೊಳಿಸುವುದೇ ಮಹಾತ್ಕಾರ್ಯ. ಅದರಲ್ಲೂ ಸಂಸ್ಥೆಗಳ ಪ್ರತಿಷ್ಠೆಗೆ ಬೆಳ್ಳಿ ಸಡಗರವೇ ಮಾಪನ. ಕಾರ್ಯಕ್ರಮಗಳನ್ನು ಯಾರೂ ಮಾಡಲು ಸುಲಭ ಸಾಧ್ಯ. ಆದರೆ ಸಂಸ್ಥೆಯನ್ನು ಮುನ್ನಡೆಸುವುದು ಮಹಾತ್ಸಾಧನೆ ಆಗಿರುತ್ತದೆ. ಇಂತಹ ಸಂಸ್ಥೆಗಳು ಸಂಸ್ಕೃತಿ ಸಂಸ್ಕಾರಗಳ ಉಳಿವಿಗೆ ಪೂರಕವಾಗಿದೆ. ಸಂಸ್ಕೃತಿಗೆ ಪುನ:ರ್ಜೀವನ ನೀಡುವ ಕೆಲಸಗೈದು ಭವಿಷ್ಯತ್ತಿನ ಜನತೆಗೆ ನಮ್ಮ ಪರಂಪರೆಗಳನ್ನು ಗುರುತಿಸುವ ಸಾಧನೆ ನಡೆಸುತ್ತವೆ. ಇದರ ಪೋಷಣೆ ನಮ್ಮನಿಮ್ಮೆಲ್ಲರ ಹೊಣೆಯಾಗಿದೆ ಎಂದು ಪದ್ಮನಾಭ ಎಸ್.ಪಯ್ಯಾಡೆ ತಿಳಿಸಿದರು.
ತುಳು ನಮ್ಮ ತಾಯಾದರೆ ಕನ್ನಡವನ್ನು ನಮ್ಮ ಚಿಕ್ಕಮ್ಮನನ್ನಾಗಿಸಿ ಕರ್ಮಭೂಮಿಯಲ್ಲಿ ತುಳು-ಕನ್ನಡದ ಸಂಸ್ಕೃತಿಯ ತೇರನ್ನು ಎಳೆಯುತ್ತಾ ಕಲಾರಾಧನೆಯನ್ನು ಮಾಡುವ ಸಾಹಸಿಗರು ನಾವು. ಸಂಸ್ಕೃತಿ-ಕಲೆಗಳ ಉಳಿವಿಗೆ ನಮ್ಮ ಹೃದಯ ವೈಶಲ್ಯ ದೊಡ್ಡದು. ಇಂದು ಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಲೆಯ ಬೆಳವಣಿಗೆ ಮತ್ತು ಉಳಿವಿಗೆ ಕಾರಣವಾದ ಈ ವೇದಿಕೆ ಗಂಡುಕಲೆಯ ಸಂಭ್ರಮಕ್ಕೆ ನಾಂದಿಯಾಡಿದೆ. ಮಹಾರಾಷ್ಟ್ರದ ಎಲ್ಲಾ ಪ್ರಕರದ ದೊಡ್ಡ ಗೌರವವನಾಗಿಸಿ ಈ ರಜತೋತ್ಸವ ಆಚರಿಸುತ್ತಿದ್ದೇವೆ. ಕಲಾವಂತಿಕೆ ಇಲ್ಲದೆ ಜೀವನ ಸಾರ್ಥಕವಾಗಲ್ಲ. ಕಲೆ, ಭಾಷೆ ಇದ್ದಲ್ಲಿ ಸಂಸ್ಕೃತಿಯಿದೆ. ಆದುದರಿಂದಲೇ ಕಲಾವಿದರನ್ನು ಪರಿಚಯಿಸುವ ಅಗತ್ಯವಿದೆ. ಇದಕ್ಕಾಗಿ ನಾವು ಹುಟ್ಟೂರಿಗೆ ಹೋಗುವ ಅವಕಾಶವನ್ನು ನೀಗಿಸಿ ಕಲಾ ಸಂಘಟಕ ಪ್ರಕಾಶ್ ಎಂ.ಶೆಟ್ಟಿ ಎಲ್ಲಾ ಹಿರಿಯ ಕಲಾವಿದರು-ಯಕ್ಷಗಾನವನ್ನು ಮುಂಬಯಿಗೆ (ಮನೆಗೆ ಪಾರ್ಸೆಲ್ ತರಿಸಿದಂತೆ) ಬರಮಾಡಿಸಿ ಕೊಂಡು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ್ದಾರೆ. ಸಂಘಟನೆ ಎನ್ನುವುದು ಪ್ರತಿಭೆ. ಬೃಹನ್ಮುಂಬಯಿಯಲ್ಲಿ ಕಲಾಸಾರಥಿ ಕರ್ನೂರು ಮೋಹನ್ ರೈ ಮತ್ತು ಪ್ರಕಾಶ್ ಶೆಟ್ಟಿ ಸುರತ್ಕಲ್ ಅಂದರೆ ಸಂಘಟನೆ ಎನ್ನುವ ನಾಣ್ಯದ ಎರಡು ಮುಖಗಳಂತೆ. ಸಂಘಟನಾ ಅವಳಿ ವೀರರು. ಸಾವಿರಾರು ಕಲಾಮಾತೆಯ ಆರಾಧಕರನ್ನು ಮುಂಬಯಿಗೆ ಆಹ್ವಾನಿಸಿ ಗೌರವಿಸಿದ ಸಂಘಟನಾ ಕೋಟಿ-ಚೆನ್ನಯರು. ಕಲಾಕಾರ ಯೋಗ್ಯರನ್ನು ಹರಸುವುದು ದೊಡ್ಡ ಕೆಲಸ. ಇದನ್ನು ಇವರು ಪರಿಪೂರ್ಣವಾಗಿ ನಿಭಾಯಿಸಿದ್ದಾರೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಸುರೇಂದ್ರ ಕುಮಾರ್ ತಿಳಿಸಿದರು.
ಸನ್ಮಾನಿತರ ಪರವಾಗಿ ಆರ್ಗೋಡು ಮೋಹನ್ ದಾಸ್ ಮಾತನಾಡಿ ಇದು ಕಲಾವಿದರ ಪಾಲಿನ ಹೃದಯ ಸ್ಪರ್ಶಿ ಸನ್ನಿವೇಶ, ಭರ್ಜರಿ ಸಮಾರಂಭದಲ್ಲಿ ಜೀವನದ ಸಾರ್ಥಕ ಕ್ಷಣಗಳನ್ನು ಮೆಲಕು ಹಾಕಿಸಿದ ಕ್ಷಣ. ಕಲೆಯನ್ನಾರಾಧಿಸಲು ಬಂಟರು ಮುಂದೆ . ಬಂಟರು ಅಂದರೆ ವ್ಯವಸ್ಥೆ ಎಂದರ್ಥ. ವ್ಯವಸ್ಥೆಗೆ ಶಿಸ್ತು ಬದ್ಧ ಬಂಟರು ಕಲಾ ಪೋಷಕರೂ ಹೌದು. ಇದಕ್ಕೆ ಮಹಾನ್ ಕಲಾ ಸಂಘಟಕ ಪ್ರಕಾಶ್ ಶೆಟ್ಟಿ ಅವರೇ ನಿದರ್ಶನ. ಬಂಟರು ಕಲಾಕರರನ್ನು ನೆಂಟರು ಎಂದು ಗೌರವಿಸುತ್ತಿದ್ದು ಇತ್ತೀಚೆಗೆ ಇದೇ ಬಂಟರ ಸಂಘದಲ್ಲಿ ಯಕ್ಷಗಾನಗಳ ಮಹಾಪೂರವೇ ಆಗಿರುವುದು ಸಾಕ್ಷಿ ಎಂದರು.
ಈ ಸಂಭ್ರಮವೇ ಅದ್ಭುತ್-ಸುಂದರ ಮತ್ತು ಸಂತೋಷದ ಛಲವಾಗಿದೆ. ಇದು ಮರೆಯಲಾಗದ ಇತಿಹಾಸ ಸೇರುವ ಅದ್ಭುತದಲ್ಲೊಂದಾಗಿದೆ. ಕಲಾ ಪೋಷಣೆಗೆ ಸಮಾಧಾನ ತಂದ ಸಮಾರಂಭವೇ ಸರಿ ಎಂದು ತೀರ್ಥಹಳ್ಳಿ ಗೋಪಾಲ ಆಚಾರ್ಯ ಅಭಿಪ್ರಾಯ ಪಟ್ಟರು.
ಸಮಯ ಪ್ರಜ್ಞೆಗೆ ಸಾಕ್ಷಿಯಾದ ಸಂಭ್ರಮ: ನಿಗದಿತ ವೇಳೆಗೇ ದೀಪ ಪ್ರಜ್ವಲನೆ ಮತ್ತು ಕಾರ್ಯಕ್ರಮಕ್ಕೆ ಚಾಲನೆ, ಗಣ್ಯರಿಂದಲೂ ಹಿತ-ಮಿತ ಮಾತು (ಒಂದು ನಿಮಿಷದ್ದೇ ಉವಾಚ). ಅಚ್ಚುಕಟ್ಟಾದ ಕಾರ್ಯಕ್ರಮ. ಶಿಸ್ತು ಬದ್ಧ ವೇದಿಕೆಯ ನಡವಳಿಕೆ. ಎಂದಿನಂತೆ ದೀಘವಾಗದ ಕ್ರಮಬದ್ಧ (ಹಾಸ್ಯ ಚಕಿತ) ಕಾರ್ಯನಿರ್ವಹಣೆ. ಹಿತಮಿತ ಸರಿಯಾದ ವೇಳೆಗೆ ಬಡಿಸಿದ ಭೋಜನ.
ಯಕ್ಷಗಾನ ಭಾಗವತಿಕೆಯೊಂದಿಗೆ ಸಂಭ್ರಮ ಆದಿಗೊಂಡಿತು. ಕಲಾ ಪ್ರಕಾಶ ಪ್ರತಿಷ್ಠಾನದ ರೂವಾರಿ ಮತ್ತು ಸಂಚಾಲಕ ಪ್ರಕಾಶ್ ಎಂ. ಶೆಟ್ಟಿ, ಸುರತ್ಕಲ್ ಸುಖಾಗಮನ ಬಯಸಿ ಅತಿಥಿಗಳಿಗೆ ಪುಷ್ಪಗುಪ್ಚಗಳನ್ನಿತ್ತು ಗೌರವಿಸಿದರು. ಪ್ರಾ| ಎಸ್.ವಿ ಉದಯ್ ಕುಮಾರ್ ಶೆಟ್ಟಿ ಮಣಿಪಾಲ ಅವರು ಸನ್ಮಾನಿತರ ಸಾಧನಾ ಕಲಾ ಕ್ಷೇತ್ರದ ಪೂರ್ವಾಪರ ಅಭಿನಂದನೆಗೈದು ಸನ್ಮಾನಿತರನ್ನು ಪರಿಚಯಿಸಿದರು. ಕಲಾ ಸಾರಥಿ ಕರ್ನೂರು ಮೋಹನ್ ರೈ ಮತ್ತು ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿ ಅತಿಥಿಗಳನ್ನು ಪರಿಚಯಿಸಿದರು. ಪ್ರೇಮ್ ಬಿ.ಶೆಟ್ಟಿ ವಂದನಾರ್ಪಣೆಗೈದರು.
ಸಮಾರ೦ಭದ ಚಿತ್ರಗಳು
ಚಿತ್ರ/ವರದಿ ಕೃಪೆ : ರೋನ್ಸ್ ಬಂಟ್ವಾಳ್
|
|
|